Thursday, April 10, 2008

ಬಂಗಾರ ಲಹರಿ




ಆವತ್ತು ಮುಂಜಾನೆ ಎಂದಿನಂತೆ ನಾನು ನನ್ನ ಪೇಪರ್ ಪ್ರಪಂಚದಲ್ಲಿ ಮುಳುಗಿದ್ದೆ. ಆ ದಿನ ದಸರೆ ರಜಾ ಬೇರೆ ಹೀಗಾಗಿ ದಿನಪತ್ರಿಕೆಯನ್ನು ಸ್ವಲ್ಪ ಆರಾಮವಾಗಿಯೇ ಓದುತ್ತಾ ಇದ್ದೆ. ಮಧ್ಯದಲ್ಲೇ ನನ್ನಾಕಿ ಮುಂಜಾನೆಯ ಚಹಾನ ನಾನು ಕೇಳೋ ಮೊದ್ಲ ತಂದು ನನ್ನ ಕೈಗಿತ್ತಳು. ಆವತ್ತು ಚಹಾ ದಿನಕ್ಕಿಂತ ಹೆಚ್ಚು ರುಚಿ ಅನಿಸಿತು.

ರಜಾ ಅದೆ ಅದಕ್ಕ ನನ್ನ ಹೆಂಡತಿನೂ ರುಚಿಯಾಗಿ ಚಹಾ ಮಾಡಿದ್ದಾಳೆ, ನನಗೂ ಆಸ್ವಾದಿಸಲು ಸಮಯ ಅದೆ ಅಂತ ಒಂದೆರಡು ನಿಮಿಷ ಸಂತೋಷಪಟ್ಟೆ, ಮತ್ತೆ ಪೇಪರ್‌ನಲ್ಲಿ ಮುಳುಗಿದೆ. ಅಷ್ಟರಲ್ಲೇ ನನ್ನಾಕಿ ರಾಗವಾಗಿ ರಾಗ ತೆಗೆದಳು... ಅವಳು ಸಂಗೀತ ಕಲಿಯದಿದ್ದರೂ ಕೂಡ ಈ ರಾಗವನ್ನು ಸರಾಗವಾಗಿ, ನಿರರ್ಗಳವಾಗಿ ಶುರು ಮಾಡ್ತಾಳೆ. ರೀ..ಸ್ವಲ್ಪ ಇಲ್ಲಿ ಬರ್ತೀರೇನು..?

ಕೇಳೋದೇನು? ಬರೀ ಪ್ರಶ್ನೆ ಪ್ರಶ್ನೆಯಲ್ಲಷ್ಟ.. ನಾನೊಂದಿಷ್ಟು ಒಟಗುಡುತ್ತ ಅಡುಗೆ ಮನೆಗೆ ನಡೆದೆ. ಓ..! ನನಗೇ ಆಗಲೇ ಜ್ಞಾನೋದಯವಾಯಿತು.. ಆ ರುಚಿಯಾದ ಚಹಾದ.. ಆ ಸರಾಗವಾದ ರಾಗದ ಹಿಂದಿನ ಉದ್ದೇಶ.. ಅವಳು ಯಾಕೆ ನನ್ನ ಕರೆದಿದ್ದು ಅಂತ ನನಗೆ ಗೊತ್ತಾಗಿ ಹೋಗಿತ್ತು.

ನನ್ನ ಶ್ರೀಮತಿ ಅತೀ ಶ್ರದ್ಧೆಯಿಂದ ವಿನಯ ಗಾಂಭೀರ್ಯದಿಂದ ಹೇಳಿದಳು, ರೀ ಈವತ್ತು ದಸರಾ, ಸಾಡೇ ತೀನೀ ಮುಹೂರ್ತ, ಒಂದಿಷ್ಟು ಬಂಗಾರ ತೊಗೊಂಡು ಬರೂಣ್ರೀ.. ಅಂತ.. ಅವಳ ಜೊತೆ ನನ್ನ ಎಲ್ಲ ಕಲೆಗಳೂ/ವಿದ್ಯೆಗಳೂ ಮುಗಿದು ಹೋಗಿಬಿಟ್ಟಿವೆ.. ಅವಳು ಹೇಳಿದ್ದಕ್ಕೆ ಹೂಂ ಅನ್ನದೇ ಬೇರೆ ಏನೂ ನನಗೆ ಈಗ ಬರೋದಿಲ್ಲ.. ಪಾಪ! ಅಕೀ ಹೇಳೂದರಾಗರ ಏನ ತಪ್ಪ ಅದ.. ಬಂಗಾರ ಅಂದ್ರ ಇಡೀ ಪ್ರಪಂಚನೇ ಬಾಯಿ ಬಿಡ್ತದ.. ಅಂಥಾದರಾಗ ಇಕಿ ಅರ ಏನ ಮಾಡತಾಳ.. ಮತ್ತೆ ಮ್ಯಾಲೆ ನಮಗೊಬ್ಬಾಕಿ ಕುಲಪುತ್ರಿ, ಮುದ್ದಿನ ಕೂಸೂ ಅದ.. ನಾ ಏನರ ಕಾಂ- ಕೀಂ ಅಂದರ, ನನ್ನಾಕಿ ಮಾತ್ರ ಪ್ರತೀ ಸಲಾನೂ ತನ್ನ ಬ್ರಹ್ಮಾಸ್ತ್ರವನ್ನ ಯಶಸ್ವಿಯಾಗೀನ ಪ್ರಯೋಗ ಮಾಡ್ತಾಳ. "ಅಲ್ರೀ.. ನಾಳೆ ಮಗಳ ಮದುವೀಗೆ ಏನು ಮಾಡೋರು..." ಬ್ಯಾಡಪ್ಪ ಸುದ್ದಿ ಅಂತ ನಾನ.. ಸುಮ್ಮನಾಗಿಬಿಡ್ತೀನಿ.

ಆದರ ಈ ಬಂಗಾರದ ವಿಚಾರ ಮಾತ್ರ ನನ್ನನ್ನ ಯಾವಾಗಿದ್ರೂ, ಒಂದು ವಿಚಾರ ಲಹರಿ ಒಳಗ ಕರಕೊಂಡು ಹೋಗ್ತದ.. ಅದರ ಬಗ್ಗೆ ಯೋಚಿಸಿದಷ್ಟೂ ಅಷ್ಟೇ ಜಟಿಲವಾಗ್ತದ ಈ ಪ್ರಶ್ನೆ.. ಜನಕ್ಕ ಬಂಗಾರ ಅಂದ್ರ ಯಾಕ ಪ್ರೀತಿ, ಶ್ರದ್ಧೆ, ಭಕ್ತಿ.. ಇತ್ಯಾದಿ..ಇತ್ಯಾದಿ..?

ಈ ಪ್ರಶ್ನೆ ಬಗ್ಗೆ ಯೋಚಿಸಿದಷ್ಟೂ ನಾನು ಇನ್ನೂ ದೀರ್ಘವಾಗಿ ಯೋಚಿಸ್ತೀನಿ. ಒಂದೊಂದು ಸಲ ದಿಕ್ಕೂ ತಪ್ತದ.. ಅಲ್ಲಾ ನೀವ ನೋಡ್ರಿ ನನ್ನ ಹೆಂಡ್ತಿನ ಹಿಡ್ಕೊಂಡು ಎಲ್ಲರೂ.. ಪ್ರತಿಯೊಬ್ಬರೂ ಬಂಗಾರ ಅಂದ್ರ ಬಿದ್ದು ಸಾಯ್ತಾರ.. ಅದಕ್ಕ ಇಡಿ ಜಗತ್ತಿನೊಳಗ ಒಂದು ವಿಶೇಷ ಸ್ಥಾನ-ಮಾನ ಅದ..

ಈಗ ಸಣ್ಣ ಮಕ್ಕಳ್ನ ತೊಗೋರಿ.. ನಾವು ಪ್ರೀತಿಯಿಂದ ನಮ್ಮ ಮಕ್ಕಳ್ನ ಬಂಗಾರ.. ಚಿನ್ನ.. ಚಿನ್ನೂ.. ಚಿನ್ನಾರಿ..ಶೋನಿ.. ಅಂತ ಎಲ್ಲ ಕರೀತೀವಿ.. ಉತ್ತರ ಭಾರತದಾಗ, ತಮ್ಮ ಪ್ರೀತಿಯವರನ್ನ ಸೋನು ಅಂತ ಕರೀತಾರ..ಅಲ್ಲಾ ನಮ್ಮ ಮಕ್ಕಳನ್ನ ನಮ್ಮ ಪ್ರೀತಿಯವರನ್ನ ಬಂಗಾರ ಅಂತ ಯಾಕ ಕರೀತಿವಿ?

ಮತ್ತೆ ಇತಿಹಾಸಕಾರರನ್ನ ತೊಗೋರಿ.. ಇತಿಹಾಸದ ಯಾವುದೇ ಸುಭೀಕ್ಷ ಕಾಲವನ್ನ ಚಿನ್ನದ ಯುಗ ಅಂತ ಕರೀತಾರ. ಮನ್ನೆ ಮನ್ನೆ ಒಬ್ಬ ಪತ್ರಕರ್ತರು ಹೇಳ್ತಾ ಇದ್ದರು.. ಭಾರತವನ್ನ 'ಚಿನ್ನದ ಹಕ್ಕಿ' ಅಂತ ಕರೀತಾರ ಅಂತ..ಅವರ ಮಾತು ಅವರ ಮಾತಿನ ಅರ್ಥ ತಲೆಗೆ ಹೋದರೂ ಬಂಗಾರದ ವಿಚಾರದ ನಶಾ ಹಂಗ.. ಏರಲಿಕ್ಕತ್ತಿತ್ತು..

ಹೋದರ ಹೊಗಲಿ.. ಒಂದು ಛೊಲೊ ಅಣ್ಣಾವ್ರ ಪಿಕ್ಚರ್ ನೋಡೋಣು ಅಂದ್ರೂ.. ಆ ಪಿಕ್ಚರ್ ಗಳ ಹೆಸರೂ 'ಬಂಗಾರದ ಮನುಷ್ಯ', 'ಬಂಗಾರದ ಪಂಜರ'... ಹೋಗ್ಲಿ ನನ್ನ ಪ್ರೀತಿಯ ನಟಿ ಭಾರತೀನೂ, 'ಬಾಳ ಬಂಗಾರ ನೀನು..' ಹಾಡಿಗೆ ತಾನೋ-ತಂದಾನೋ ಅಂತ ಕುಣಿತಾಳ.. ಏನಂತ ಹೇಳ್ಲೀರೀ ನಾ ಇದಕ್ಕ..

ಈ ಬಂಗಾರ ಬರೀ ನಮ್ಮ ಕನ್ನಡಕ್ಕ ಮಾತ್ರ ಸೀಮಿತ ಆಗಿಲ್ಲ.. ಇಡೀ ಪ್ರಪಂಚಕ್ಕ ಇದರ ಹುಚ್ಚು ಅದ.. ಒಲಂಪಿಕ್ಸ್ ನಂಥಾ ಒಲಂಪಿಕ್ಸ್ ನಾಗ.. ಗೆದ್ದವರಿಗೆ ಬಂಗಾರದ ಪದಕ.. ಅಲ್ಲಾ ನಮಗ-ನಿಮಗೆಲ್ಲ ಗೊತ್ತು, ಪ್ಲಾಟಿನಂ, ವಜ್ರ. ಇವೆಲ್ಲ ಬಂಗಾರಕ್ಕಿಂತ ತುಟ್ಟಿ ಅಂತ.. ಅವುಗಳ ಪದಕ ಯಾಕ ಕೊಡೂದಿಲ್ಲ..ಬಂಗಾರನ.. ಯಾಕ ಆಗಬೇಕು ಅಂತ..? ಆಂಗ್ಲದಲ್ಲಿ ಒಂದು ಗಾದೆ ಮಾತು ಅದ "ಆಲ್ ದಟ್ ಗ್ಲಿಟರ್ಸ್ ಈಸ್ ನಾಟ್ ಗೋಲ್ಡ್" ಅಂತ.. ಈಗರ ಒಪ್ತೀರೋ ಇಲ್ಲೋ ಬಂಗಾರ ಅಂದ್ರ ಜಗತ್ತ.. ಬಾಯಿ ಬಿಡ್ತದ ಅಂತ..

ನೀವು ಪ್ರತಿಯೊಂದು ವಿಚಾರ ತೊಗೋರಿ, ಮನೆ-ಮಠ, ಹೊಲ, ಅಸ್ತಿ, ಮನುಷ್ಯರು.. ಏನ ಛೊಲೋ ಇದ್ದರೂ ಅದಕ್ಕ ಬಂಗಾರ ಅಂತಾರ.. :)

ತ್ರೇತಾಯುಗದಿಂದ, ಕಲಿಯುಗದ ತನಕ ಬಂಗಾರ ತನ್ನ ಬೆಲೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದದ ಅಂದ್ರ ನೀವ ವಿಚಾರ ಮಾಡ್ರ್ಯಲ್ಲಾ..ಒಂದ ನಾಕ ಅಕ್ಷರ ಓದ್ಲಿಕ್ಕೆ-ಬರೀಲಿಕ್ಕೆ ಬರಲಿಲ್ಲ ಅಂದ್ರೂ, ಒಂದು ತೊಲಿ ಬಂಗಾರದ ಧಾರಣಿ ಮಾತ್ರ ಎಲ್ಲಾರಿಗೂ ಗೊತ್ತಿರತದ..ಹುಟ್ಟಿದ ಕೂಸಿನಿಂದ ಹಿಡ್ಕೊಂಡು, ಮುಪ್ಪಾನ ಮುದುಕರವರೆಗೂ ಜಗತ್ತಿಗೆ ಗುಂಗ ಹಿಡಿಸ್ತದ ಈ ಬಂಗಾರ..

ಈ ಬಂಗಾರದ ಜಟಿಲ ಪ್ರಶ್ನೆ, ಈ ಬಂಗಾರ ಲಹರಿ.. ಯೋಚಿಸಿದಷ್ಟೂ ವಿಶಾಲವಾಗಿ ಬೆಳೀತದ.. ಈ ಪ್ರಶ್ನೇನೂ ಹೆಂಡತಿ, ಮಕ್ಕಳು, ಸಂಸಾರ, ಮನಿ.. ಈ ಥರ ಇನ್ನೊಂದು ಮಾಯಾ ಅದ.. ಉತ್ತರ ಹಿಡುಕ್ಕೋತ ಹೋದ್ರ ಎಲ್ಲಾ ಶೂನ್ಯ ಅದ.. ಆ ಮೇಲೆ ನಾ ಸನ್ಯಾಸಿ ಆಗಬೇಕಾಗ್ತದ ಅಂತ ನಕ್ಕು ಸುಮ್ಮನಾಗ್ತೀನಿ. ಅಲ್ಲಾ ನಿಮಗೂ ಯಾವಾಗರ ಈ ಬಂಗಾರದ ಗುಂಗು ಹಿಡಿದದ್ದು ಅದ ಏನು..? ಇದ್ರ ನಾ ಬರೆದಿದ್ದನ್ನ ಓದಿ ನಕ್ಕು ಬಿಡ್ರಿ..ಇಲ್ಲಾ ಅಂದ್ರ, ಯಾವಾಗರ ಈ ಗುಂಗು ಹಿಡಿತಂದ್ರ ನನ್ನ ನೆನಪಿಸಿಕೊಳ್ರಿ ಅಷ್ಟು ಸಾಕು :)

"ನಿಮ್ಮ ಬಾಳು ಬಂಗಾರವಾಗಲಿ..!!!" :)
[ಈ ಲೇಖನ ದಟ್ಸ್ ಕನ್ನಡದಲ್ಲೂ ಪ್ರಕಟವಾಗಿತ್ತು: ಬಂಗಾರ ಲಹರಿ, ಯಾಕೋ ಬರೀ ಲಿಂಕ್ ಕೊಡೋ ಮನಸಾಗಲಿಲ್ಲ.. :-)]

ದಟ್ಸ್ ಕನ್ನಡದಲ್ಲಿ ನನ್ನ ಕೆಲವು ಕವನಗಳು..

ದಟ್ಸ್ ಕನ್ನಡದಲ್ಲಿ ನನ್ನ ಕೆಲವು ಕವನಗಳು..



  • ಮೊದಲ-ಮಳೆ


  • ಮೌನ -ಸ್ಪಂದನ


  • ಹನಿ-ನೆನಪು...


  • ಮರಳು-ಮರುಭೂಮಿ


  • ಗುಲ್‌-ಮೊಹರ್‌
  • Friday, February 22, 2008

    ನೆನಪು-ಕನಸು-ಮತ್ತು-ನಾ!

    ಖಾಲಿ-ಖಾಲಿ ಮನಸ ತುಂಬೆಲ್ಲ
    ನಿನ್ನದೇ ಘಮ
    ಖಾಲಿ ಪುಸ್ತಕದ ಹಾಳೆಗಳಿಂದ
    ಹೊಮ್ಮುವ ಆ ಸುಗಂಧದಂತೆ..

    ಒಂದರೆ ಘಳಿಗೆ ಮನದ ಪುಟಗಳು ಖಾಲಿ
    ಏನೋ ಬರೆದಳಿಸಿದ ದೂರದ ನೆನಪು..
    ಮತ್ತೆ ಪುಟ ತಿರುವಿದರೆ
    ನೆನಪುಗಳ ಚುಕ್ಕಿ ಮೂಡಿಬಿಟ್ಟಿವೆ
    ಯಾಕೋ ತಿಳಿಯದು ಮನದಾಟದ ಈ ಗೋಜಲು!

    ನೆನ್ನೆ-ಇಂದುಗಳಲ್ಲಿ, ನೆನ್ನೆ ಚೆನ್ನಿತ್ತೇನೋ..
    ನಾಳೆ, ಮತ್ತೆ ಇಂದಿನಂತೆ, ಮತ್ತೆ ನೆನ್ನೆಯ ಮೆಲುಕು
    ಕನಸುಗಳ ಬಗ್ಗೆಯಂತೂ ಕೇಳಲೇ ಬೇಡ ನೀ
    ನೆನಪು ಪುಸ್ತಕದ ಚುಕ್ಕಿಯಾದರೆ
    ಕನಸು ಆಗಸದ ಚುಕ್ಕಿ..
    ನೆನ್ನೆಯದೋ, ಇಂದಿನದೋ, ನಾಳೆಯದೋ ತಿಳಿವುದೇ ಇಲ್ಲ..!
    ಎಲ್ಲಿ ಯಾವಾಗ ಜಾರುವುದೋ, ಎಲ್ಲಿ ಯಾವಾಗ ಮಿನುಗುವುದೊ ಗೊತ್ತಿಲ್ಲ..

    ನೆನಪಿದ್ದರೂ ಮನಸೇಕೆ ಖಾಲಿ?
    ಕನಸಿದ್ದರೂ ಈ ನಯನಗಳಿಗೆ ಮತ್ತೇನರದೋ ಖಯಾಲಿ..
    ಕಳೆದು ಹೋಗುತ್ತೇನೆ ನ(ನಿ)ನ್ನಲ್ಲೇ ನಾ..
    ಮತ್ತೆಲ್ಲಿಂದ ಹೇಗೆ ಮರಳಿ ಬರುತ್ತೇನೋ..!

    ನನ್ನೊಡನೇ ನಾನಾಡುವ ಕಣ್ಣಾ-ಮುಚ್ಚಾಲೆ
    ಯಾವಾಗ ಶುರುವಾಗಿ ಯಾವಾಗ ಮುಗಿಯಿತೋ
    ಅರ್ಥವಾಗುವುದಿಲ್ಲ..
    ನಾನೇ ನನಗೊಂದು ಒಗಟು
    ನೀನಾದರೂ ಏನು ಮಾಡೀಯ..

    Tuesday, August 07, 2007

    ಪ್ರಸವ..!

    ಪ್ರಸವ..!

    ಆ ದಿನ, ಆ ಕ್ಷಣ
    ಬೆರೆತವು ನಮ್ಮಿಬ್ಬರ ತನು-ಮನ
    ಅದೇನಾ.. ಅದೇನಾ..?
    ನಮ್ಮ ಪ್ರೀತಿ ಕುಡಿಯೊಡೆದ
    ಮಧುರ ಮೊದಲ ಕ್ಷಣ..?!

    ಅಂದಿನಿಂದ ನನ್ನಲೊಂದು
    ಹೊಸ ಜೀವದ ತುಡಿತ
    ಅರಿತೋ ಅರಿಯದೆಯೋ
    ಈಗ ಸದಾ ಅದರ ಮಿಡಿತ..

    ಒಂದರೆ ಘಳಿಗೆ
    ಬಯಕೆಗಳ ಮಹಾಪೂರ
    ಮರು ಘಳಿಗೆ
    ಮನಸೇಕೋ ಭಾರ, ಬಲು ಭಾರ..

    ನನ್ನೀ ಭಾವ-ಸಂಧಿಗ್ಧಗಳಿಗೆ
    ನಾನಾ ಕಾರಣ..? ನೀನಾ ಕಾರಣ..?
    ಅಥವಾ ನನ್ನಲ್ಲೇ ಒಡಮೂಡಿದ
    ನಮ್ಮ ಪ್ರೀತಿಯ ಭ್ರೂಣ..?!

    ದಿನಗಳೆದಂತೆ
    ಬಯಕೆಗಳ ಭಾರವಿಲ್ಲ..
    ಬಯಕೆಗಳ ಭೋರ್ಗರೆತ ಬೇಡ
    ಸದಾ ನಿನ್ನ ಸನಿಹದ ಸೋನೆ
    ಜಿನುಗುತಿರಲಿ ಎಂಬ ಹಂಬಲ..!

    ಬೆಳೆಯುತಿದೆ
    ನಮ್ಮ ಪ್ರೀತಿಯ ಅಮೂರ್ತ ರೂಪ
    ಮನದಲೇನೋ ಸವಿ ಕಳವಳ!

    ಮೂಡುತಿವೆ ಪ್ರೀತಿಗೆ
    ರೂಪು-ರೇಷೆ
    ಆಡುತಿವೆ ಎಂದೂ ಕೇಳದ
    ಹೊಸ ಭಾಷೆ..

    ಸಂತಸ-ದುಗುಡಗಳೊಂದಿಗೆ
    ಕಳೆಯುತಿವೆ ಕ್ಷಣ-ಕ್ಷಣ
    ಪ್ರಸವ ವೇದನೆಯ ಕಲ್ಪನೆ..
    ಕಂಡರಿಯದ ತಲ್ಲಣ.. ಕಂಪನ..!!

    ಆ ದಿನ..
    ಅಬ್ಬಾ! ಜೀವ ಹೋಗಿ
    ಮರಳಿ ಬಂದ ಅನುಭಾವ..
    ವಾತ್ಸಲ್ಯದ ಆರೈಕೆಗೆ
    ಕೊನೆಗೂ ಜೀವಂತವಾಯಿತು
    ಹೊಸದೊಂದು ಜೀವ..
    ಅಂದು ನಮ್ಮ ಪ್ರೀತಿಯ ಪ್ರಸವ..!

    ಪ್ರೀತಿ ಈಗ ಉಸಿರಾಡುತಿದೆ
    ತನ್ನದೇ ಸ್ವಂತಿಕೆಯಿಂದ..

    ಒಂದಾದ ಪ್ರೀತಿ, ಬೇರೆಯಾಯಿತೇ?
    ಅಥವಾ..? ಬೇರೆಯಾದ ಪ್ರೀತಿ ಒಂದಾಯಿತೆ..?!!
    ಬಿಡಿಸಲಾಗದ ಈ ಒಗಟು..
    ಪ್ರೀತಿ ಇರುವವರೆಗೂ..
    ಗೆಳೆಯ..
    ಜನ ಮರುಳು.. ಜಾತ್ರೆ ಮರುಳು...!

    Friday, May 11, 2007

    ಮಳೆ.. - ೧

    ಪದೇ ಪದೇ ನೆನಪಾದೆ.. ಪದೇ ಪದೇ ನೆನೆದೆ ಅನ್ನೋ ಥರ.. ನಿನ್ನ ಬಗ್ಗೆ ಮತ್ತೆ ಬರೆಯೋಣ ಅನಿಸ್ತಾ ಇದೆ.. ಕಲ್ಪನೆಗಳಿಗೆ ಕೊನೆಯೆಲ್ಲಿ..? :) ಈಗ ನಿನ್ನ ಋತು.. ದಿನ-ಬೆಳಗಾದರೆ ಮತ್ತೆ ನಿನ್ನ ನೋಡುವ ಅವಕಾಶ ಸಿಗಬಹುದೇನೊ ಅನ್ನೋ ಭಾವನೆಯಲ್ಲೇ.. ದಿನಗಳು ಕಳೆದದ್ದು ಗೊತ್ತೇ ಆಗಲ್ಲ...

    ಸುಡು ಬಿಸಿಲ ದಿನಗಳಲ್ಲೂ ನಿನ್ನ ನಿರೀಕ್ಷೆಯಲ್ಲೇ ದಿನ ನೂಕ್ತೀನಿ ನಾನು.. ಆದರೆ ಒಮ್ಮೊಮ್ಮೆ ಅನಿಸುತ್ತೆ.. ಆ ಬಿಸಿಲ ಬಿಸಿ ತಾಕೋದಕ್ಕೇ ನಿನ್ನ ತಂಪು ಅಷ್ಟು ಹಿತ ಅನಿಸೋದು ಅಂತ..ಸದಾ ಕಾಲ ನೀನೇ ಇದ್ದಿದ್ರೆ ಹೇಗಿರೋದು...? ಚೆನ್ನಾಗಿರೋದು ಅಂತ ಅನಿಸುತ್ತೆ.. ಆದರೆ ಎಲ್ಲೋ ಅನುಮಾನ.. ಹಾಗಿದ್ದಿದ್ರೆ.. ನಾನು ನಿನ್ನ, ನಿನ್ನ ಬರುವನ್ನ, ನಿನ್ನೊಡನೆ ಕಳೆಯೋ ಪ್ರತಿ ಕ್ಷಣಗಳನ್ನ ಇಷ್ಟು ಗಾಢವಾಗಿ ಬಯಸುತ್ತಿದೆನಾ/ಪ್ರೀತಿಸುತ್ತಿದೆನಾ ಅಂತ.. ಅರ್ಥ ಆಗುತ್ತೆ ನಿಂಗೆ ಅನ್ಕೋತೀನಿ.. ಬೇರೆಯವರಿಗೆ ಖುಶಿ ತರುವವರಿಗೆ ಅರ್ಥ ಮಾಡ್ಕೋಳ್ಳೋ ಶಕ್ತಿನೂ ಇರತ್ತೆ ಅಂತ ನಂಗೊತ್ತು :) ಹಾಡು ನೆನಪಾಗ್ತಾ ಇದೆ.."ಜೀವನ್ ಮೀಠೀ ಪ್ಯಾಸ್ ಯೆ ಕೆಹೆತೆ ಹೋ.." ನಿಜ ಅನಿಸಲ್ವ ನಿನಗೆ..?

    ಬೇಸಿಗೆಯ ವಿರಹದ ದಿನಗಳ ಬಳಿಕ.. ಬಹಳ ಕಾಯಿಸಿ ಸತಾಯಿಸಿ ಬರ್ತೀಯ.. ನನಗೆ ನಿನ್ನ ಮೇಲಿರೋ ಪ್ರೀತಿಗೆ.. ನೀನು ಬಂದರೆ ಬಣ್ಣಿಸಲಸದಳ ಸಂಭ್ರಮ.. ಯಾವ ಹಬ್ಬಕ್ಕೂ ನಾನಿಷ್ಟು ಸಡಗರ ಪಡಲ್ಲ.. ನಿನ್ನ ಜೊತೆ ಇರೋದೆ ಹಬ್ಬ ನನಗೆ :) ಇರುವಷ್ಟು ಹೊತ್ತು ಪ್ರೀತಿ ಮಳೆ.. (ಮತ್ತೆ ಬರೀತಿನಿ ಪ್ರೀತಿ ಮಳೆ ಬಗ್ಗೆ) ಆ ಮಳೆಯಲ್ಲಿ ನೆಂದು, ಮಿಂದು ಮೈ ಮರೆತು ಮನದಲ್ಲಿ ಸಂತಸದ ಹೊಳೆ ಹರೀತಾ ಇರುವಾಗಲೇ ಕಾಲನ ಗಂಟೆ.. 'ಈ ಟೈಮ್ ಅನ್ನೋದು ಪಕ್ಕಾ ೪೨೦' ಅಂತ 'ಮುಂಗಾರು ಮಳೆ' ಲಿ ಒಂದು ಸಂಭಾಷಣೆಯ ಸಾಲು.. ನಿನ್ನ ಬಗ್ಗೆ ಹೇಳ್ತಾ ಇಲ್ಲ ನಾನು.. 'ಮುಂಗಾರು ಮಳೆ' ಅನ್ನೋದು ಒಂದು ಸುಂದರ ಕನ್ನಡ ಚಿತ್ರದ ಹೆಸರು.. ಹೆಸರಿಗೆ ತಕ್ಕಂತೆ ಆ ಚಿತ್ರಕ್ಕೆ ನೀನೇ ಬಂಡವಾಳ.. ಅದರ ಮಾತು ಬೇಡ ಈಗ..

    ಸರಿ ಟೈಮ್ ಆಯ್ತು.. ನನಗೆ ನಂಬೋಕೇ ಆಗಿರಲ್ಲ.. ನಿನ್ನ ವಿದಾಯದ ಸಮಯ ಬಂತು ಅಂತ.. ಮನದಲ್ಲಿ ಎಷ್ಟೊಂದು ಆನಂದ.. ಅಷ್ಟೇ ಬೇಸರ..ನೆನಪುಗಳ ಹಸಿರನ್ನ ಮತ್ತೆ ಅಗಲಿಕೆಯ ಬೆಂಗಾವಲನ್ನ ಎರಡನ್ನೂ ಒಟ್ಟೊಟ್ಟಿಗೆ ಉಡುಗೊರೆ ಕೊಟ್ಟು ನಿಧಾನವಾಗಿ ಮರೆಯಾಗ್ತೀಯ ನೀನು.. ಆಗಷ್ಟೇ ಮೈ ತಾಕಲೋ ಬೇಡವೋ ಅನ್ನೋ ತಂಗಾಳಿಯ ಚಳಿನಲ್ಲಿ ನಾನು ಮೆಲ್ಲಗೆ ಗುನುಗ್ತೀನಿ.. "ಜೀವನ್ ಮೀಠೀ ಪ್ಯಾಸ್ ಯೆ ಕೆಹೆತೆ ಹೋ.." ಅಂತ.. :)

    Thursday, May 10, 2007

    ಮಳೆ..














    ಇಂದು ನೆನ್ನೆಯದಲ್ಲ.. ನಮ್ಮಿಬ್ಬರ ಸಂಬಂಧ.. ಪ್ರೀತಿಯ ಋತು ನೀನು.. ವರ್ಷ ಧಾರೆ.. ಏನಿದು ಅಸಂಬದ್ಧವಾಗಿವೆ ಮಾತುಗಳು ಅನಿಸ್ತಾ ಇದೆಯಾ..? :) ಇರಬಹುದೇನೋ.. ತುಂಬಾ ಬ್ಲಾಗ್ ಗಳನ್ನ ಓದಿದೆ ಇತ್ತೀಚೆಗೆ ನಿನ್ನ ಬಗ್ಗೆ.. ನೀನು ತನು-ಮನದ ಭಾವನೆಗಳ ಕೆಣಕುವ ಮೋಡಿಗಾರ ಅಂತ ಗೊತ್ತು.. ಆದರೆ.. ಹಲವು ಮನಗಳಿಗೆ ಹುಚ್ಚು ಹಿಡಿಸುವ ನಿನ್ನ ಶಕ್ತಿ ನೋಡಿದರೆ ಆಶ್ಚರ್ಯವಾಗತ್ತೆ..ನಿನ್ನ ಬಗ್ಗೆ ಬರೆಯಲ್ಲ ಜನ.. ನಿನ್ನಲ್ಲಿ ತಮ್ಮನ್ನೇ ಮರೆಯುವ ಪರಿಯನ್ನ ಬರೀತಾರೆ..:) ನೀ ನೀಡುವ ತಲ್ಲಣಗಳ ಬಗ್ಗೆ ಬರೀತಾರೆ.. ಸುಮಾರು ದಿನಗಳಿಂದ.. ಅಲ್ಲಲ್ಲ ವರ್ಷಗಳಿಂದ ನಿನ್ನ ಬಗ್ಗೆ ಬರೆಯೋ ಆಸೆ ನಂಗೆ.. ಒಂದೆರಡು ಸಲ ಬರೆದದ್ದೂ ಇದೆ.. ಆದರೆ ಅದ್ಯಾಕೋ ಇವತ್ತು ನಿನ್ನನ್ನ ಜೀವಂತಗೊಳಿಸೋ ಕಲ್ಪನೆ ಬಂತು.. ನೀನೂ ಪ್ರೀತಿಯ ಥರ.. ಒಂದೇ ವ್ಯತ್ಯಾಸ ಅಂದ್ರೆ.. ನೀನು ಕಣ್ಣಿಗೆ ಕಾಣ್ತೀಯಾ ಪ್ರೀತಿ ಕಾಣಲ್ಲ.. ಅಷ್ಟೇ.. ಆದರೆ ನೀವಿಬ್ರೂ ನನ್ನಲ್ಲಿ ಹುಟ್ಟು ಹಾಕೋ ಭಾವನೆಗಳಲ್ಲಿ ಎಂಥ ಸಾಮ್ಯ ಅಂತೀಯ.. ಈಗ ಬೇಡ ಪ್ರೀತಿ ವಿಚಾರ.. ಮಾತಿಗೆ ಬಂತು ಹೇಳಿದೆ :)


    ನಿನ್ನ ಸ್ಪರ್ಶ.. ತನುವಿನ ಅಣು-ಅಣುವನ್ನೂ ಬಡಿದೆಬ್ಬಿಸುತ್ತೆ.. 'ರೋಮಾಂಚನ..' ಗೊತ್ತಲ್ಲ..? ನಿನಗೇನೂ ಹೊಸದಲ್ಲ ಬಿಡು..:) ನೆನಪುಗಳನ್ನ.. ಭಾವನೆಗಳನ್ನ ಕೆಣಕುತ್ತೆ.. ನಿನ್ನ ಶಬ್ದ, ಅಬ್ಬರ, ಭರಾಟೆ.. ಮಿಂಚು, ಸಿಡಿಲು.. ಎಲ್ಲವೂ ಅಭೂತಪೂರ್ವ.. ನಿನ್ನ ಮತ್ತು ನೀ ನೀಡುವ ಅನುಭವಗಳನ್ನ ಬಣ್ಣಿಸುವಾಗ..ನಾ ಬರೆಯುವ ಪದಗಳು ಅಶಕ್ತವಾಗುತ್ತೆ..ಆದರೂ ನಿನ್ನ ಪದಗಳ ಬೊಗಸೆಯಲ್ಲಿ ಹಿಡಿದಿಡೋ ಆಸೆ.. ನೀ ಬಂದಾಗಲೆಲ್ಲಾ ನಾನು ಹೋದ ಜನುಮದಲ್ಲಿ ನವಿಲಾಗಿದ್ದೆನಾ.. ಅಂತ ಎಷ್ಟೋ ಸಲ ಯೋಚಿಸಿ ಮುಗುಳು ನಗೆ ನಕ್ಕೀದಿನಿ ನಾನು.. ಹೃದಯ ತುಂಬುವಂಥ ಮುಗುಳು ನಗೆ ಕೊಡೋ ಶಕ್ತಿ.. ನಿನಗೆ ಮತ್ತೆ ಪ್ರೀತಿಗೆ ತಾನೆ ಇರೋದು.. :) ಮತ್ತೆ ಪ್ರೀತಿ.. ಕ್ಷಮೆಯಿರಲಿ.. ನಿಮ್ಮಿಬ್ಬರಲ್ಲಿ ನನಗೆ ಯಾರು ಬಹಳ ಇಷ್ಟ ಅಂತ ಹೇಳೋದು.. ಬಹಳ ಕಷ್ಟ.. ನಿಮ್ಮ ಸಾಮ್ಯ.. ನಿಮ್ಮ ಸನಿಹ.. ಬದುಕನ್ನು ಮರೆಸುತ್ತೆ..:)

    ಇನ್ನೊಂದೇನು ಗೊತ್ತಾ..? ನಿನ್ನ ಬರುವು ಮನಕಷ್ಟೇ ಅಲ್ಲ.. ಇಡೀ ವಾತಾವರಣಕ್ಕೇ ತಾಜಾತನ ತುಂಬುತ್ತೆ.. ಏನೋ ಹೊಸತು.. ಏನೋ ಗೆಲುವು.. ಏನೋ ಸಂತಸ.. ನೋವ ಮರೆಸಿ ಕನಸು ಹೆಣೆಸೋ ಕಲೆಗಾರ ನೀನು..

    ನನ್ನ ಬರಹ ಅಷ್ಟು ಹತ್ತಿರವಾಯ್ತೇ ನಿಂಗೆ..? :) ಯಾಕೆ ಹೇಳು ಈ ನಗು.. ನೀ ಬರೋ ಮುನ್ಸೂಚನೆ ಕೊಡ್ತಾ ಇದೀಯ ನೀನು ನನಗೀಗ.. ಆ ಕಾರ್ಮೋಡಗಳು ಹೆಪ್ಪುಗಟ್ತಾ ಇವೆ... ಮತ್ತೆ ನಿನ್ನ ಆಗಮನದ ನಿರೀಕ್ಷೆ..ಓಹ್.. ಸಾಕು ಇನ್ನು ಬರೆಯೋಕಾಗಲ್ಲ.. ನೀನು ನನ್ನ್ಹತ್ರ ಬಂದಾಗ.. ನಿನ್ನಲ್ಲೇ ನನ್ನ ತೋಯಿಸಿ.. ನನ್ನನ್ನೇ ಮರೆಯೋದು ಬಿಟ್ಟು ಬರೀತ ಕೂತ್ಕೋತೀನಾ ನಾನು..?:) ನೀನೇ ತಾನೇ ಸ್ಪೂರ್ಥಿ ನಾ ಬರೆಯೋದಕ್ಕೆ.. ಮತ್ತೆ ಬರೀತಿನಿ ಬಿಡು.. ಸದ್ಯಕ್ಕೆ ನೀನು-ನಾನು.. ಬೇರೆ ಎಲ್ಲ ಆಮೇಲೆ.. :)

    Wednesday, April 18, 2007

    ವಾಚಾಳಿ..

    ದಿನ ಬೆಳಗಾದ್ರೆ ಏನೇ ನಿನ್ನ ಕಾಟ ಅಂತಿಯಾ? ಅಲ್ಲಾ ಸೂರ್ಯ ನೂ ದಿನ ಬೆಳಗದ್ರೆ ಬರ್‍ತಾನೆ.. ಯಾರಿಗಾದ್ರೂ ಬೇಜಾರಾಗುತ್ತಾ ಅವನು ಬಂದ್ರೆ.. ನಿಜ ಅಂದ್ರೆ ಅವನು ಮರಳಿ ಬಂದ್ರೇನೆ ಮತ್ತೊಂದು ದಿನ ಅಂತ ಶುರು ಆಗೋದು ಅಲ್ವಾ? ಅವನು ಬಂದ್ರೇನೆ ಬೆಳಗು ಅವನು ಬಂದ್ರೇನೆ ಬದುಕು...

    ಹಾಗೆ ನಾನೂ ಕೂಡ.. ಜೀವನದಲ್ಲಿ ಆಸಕ್ತಿನೇ ಇಲ್ದೇ ಬದುಕೋ ಜನಕ್ಕಿಂತ ನಾನು ವಾಸಿ ಅಂತ ನಿನಗನಿಸಲ್ವ.. ನಕ್ಕೋ,ಅತ್ತೋ, ಕೋಪ ಮಾಡ್ಕೊಂಡೋ, ವಟ ವಟ ಅಂತ ಮಾತಾಡ್ಕೊಂಡೋ.. ಹೇಗೋ.. ಒಟ್ಟಿನಲ್ಲಿ..ಜೀವನದ ಫೀಲ್ ನ ನಾನು ನಿಂಗೆ ಕೊಡ್ತೀನಿ ಅಂತ ನಿನಗನಿಸಲ್ವಾ? ಯೋಚನೆ ಮಾಡು.. ನಾನಿಲ್ದಿದ್ರೆ.. ಬಿಕೋ ಅನಿಸಲ್ಲ..?

    ಏನು ಜಂಭದ ಕೋಳಿ ಬಡಾಯಿ ಕೊಚ್ಕೊಂತೀಯ ಅಂತ ಬೇಕಾದ್ರೂ ಅನ್ಕೋ.. ನಾನು ಸುಮಾರು ದಿನಗಳವೆರೆಗೆ ನಿನ್ನ ಜೀವನದಲ್ಲಿ ಇರಲ್ಲ ಅಲ್ಲ.. ಆವಾಗ ಇದನ್ನ ಓದು (ಆ ದಿನ ಬರದೇ ಇರಲಿ ಅಂತಾನೇ ಪ್ರಾರ್ಥನೆ.. ಆದ್ರೂ..) ನಿಂಗೆ ನಿಜ ರಿಯಲೈಜ್ ಆಗತ್ತೆ..

    ಸುಮ್ನೆ ಕೂತು.. (ಐ ಮೀನ್.. ಮಾತಾಡ್ದೆ ಸುಮ್ನೆ ಕೂತು :) ) ರೂಢಿ ಇಲ್ಲ ನಂಗೆ.. ಮಾತಾಡ್ಬೇಕು ಆಂತ ಅನಿಸಿದಾಗ ಮಾತಾಡ್ಬೇಕು.. ಮಾತಾಡೋಕೆ ಟಾಪಿಕ್ ಬೇಕು ಅಂತಾನೂ ಏನೂ ಇಲ್ಲ.. ಈಗ ಕುಟ್ತಾ ಇದೀನಲ್ಲ ತೌಡು.. ಇದೇ ಥರ ಮಾತಾದ್ರೂ ಸಾಕು.. :) ಅಲ್ಲ ಅಷ್ಟಕ್ಕೂ ಭಾಷೆ ಅಂತ ಇರೋದು ಯಾಕೆ ಅಂತಾ..? ಮನಸಿಗೆ ಬಂದದ್ದನ್ನ ವ್ಯಕ್ತ ಪಡಿಸೋಕೆ ಅಂತ ತಾನೆ..? ಸೊ.. ಮಾತಾಡ್ಬೇಕು.. ಮಾತಾಡ್ತಾನೇ ಇರಬೇಕು.. ಅದೂ ನಿನ್ನ ಜೊತೆ ಮಾತಾಡೊ ಮಜಾ ನೇ ಬೇರೆ (ಕಾಟ ಅಂತ ನೀನು ಅನ್ಕೋಬಹುದೇನೋ.. ಆವಾಗಾವಾಗ.. ಎನೂ ಮಾಡಕಾಗಲ್ಲ ಸಾರ್.. ಸ್ವಲ್ಪ ಅಡ್ಜಸ್ಟ್ ಮಾಡಿ.. :) ) ಈಗ ಅಂತೂ ಬ್ಲಾಗ್ ಕೈಗೆ ಸಿಕ್ಬಿಟ್ಟಿದೆ..ಮಂಗನ ಕೈಗೆ ಮಾಣಿಕ್ಯ ಸಿಕ್ಕ ಹಾಗೆ (ನಾನು ಬ್ಲಾಗ್ ಬಗ್ಗೆ ಹೇಳ್ತಾ ಇರೋದು.. ನಿನ್ನ ಬಗ್ಗೆ ಅಲ್ಲ..;-) ) ಒಂದೊಂದ್ ಸಲ ನೀನಿಲ್ದೆ ಇದ್ರೂ ಪರವಾಗಿಲ್ಲ.. ಬ್ಲಾಗ್ ಇದೆಯಲ್ಲ.. ನೀನು ಅನ್ಕೊಂಡು ಮಾತಾಡೋಕೆ.. ಈಗ ಮಾಡ್ತಾ ಇದೀನಲ್ಲ ಹಾಗೆ.. :)

    ಅದೇನೇ ಇರಲಿ ನೀನು ನೀನೇ.. ಬ್ಲಾಗ್ ನಿನ್ಮುಂದೆ ಏನೂ ಇಲ್ಲ :)

    ಸಾಕು ಅನ್ಸುತ್ತೆ.. ಉಫ್.. ಸುಸ್ತಾಯ್ತು.. :)

    ನಿನ್ನ ನೆನಪು


















    ನಿನ್ನ ನೆನಪು

    ನಗೆ ಗೊಂಚಲು


    ನಿನ್ನ ನೆನಪು

    ಕಂಬನಿ ಹೊನಲು


    ನಿನ್ನ ನೆನಪು

    ಕಲ್ಪನೆಗಳ ತವರೂರು


    ನಿನ್ನ ನೆನಪು

    ಹೊಸ ಭಾವಗಳ ಚಿಗುರು


    ನಿನ್ನ ನೆನಪು

    ನನ್ನ ಪ್ರತಿ ಉಸಿರು


    ನಿನ್ನ ನೆನಪು

    ಮಿನುಗುವ ಕಣ್ಮಿಂಚು


    ನಿನ್ನ ನೆನಪು

    ಲಘು ಕಂಪನದ ಕೋಲ್ಮಿಂಚು


    ನಿನ್ನ ನೆನಪು

    ಬದುಕಿನಾಸರೆ


    ನಿನ್ನ ನೆನಪು

    ಪ್ರೀತಿಯ ಸೆಲೆ


    ನೀನು..

    ಪ್ರೀತಿ..

    ನನ್ನ ಬಾಳ ಸಂಗಾತಿ..

    Friday, April 13, 2007

    ಅಳುಕು..











    ಇಂದು ಸಂಜೆ ಏನೋ ಅಳುಕು ಮನದಲ್ಲಿ.. ಏನು ಅಂತ ಗೊತ್ತಿಲ್ಲ.. ಅರ್ಥಾನೂ ಆಗ್ತಿಲ್ಲ.. ಯಾವುದೋ ನೋವಿನ ಎಳೆ.. ಏನೋ ತಳಮಳ..
    ಕತ್ತಲಲ್ಲಿ ಏನೋ ತಡಕಾಡುತ್ತಿರೋ ಅನುಭವ..ಒಂದೊಂದು ಸಲ ಬದುಕೇ ಕತ್ತಲಲ್ಲಿ ಗೊತ್ತಿರದ ವಸ್ತುವಿಗಾಗಿ ತಡಕಾಡುವುದೇನೊ ಅನ್ನೋ ಭಾವನೆ.. :) ಈ ಮನಸು, ಅದರ ಅಸ್ತಿತ್ವ ಅದರ ಆಳ.. ಅದರ ನಿರೀಕ್ಷೆ.. ಅದರ ತಳಮಳ ಎಲ್ಲ ನೋಡಿದರೆ.. ನನಗೆ ನಾನೇ ಅಪರಿಚಿತಳು ಅನಿಸುತ್ತೆ..ಅಂಥದರಲ್ಲಿ ಇನ್ನೊಂದು ಮನಸು ನನ್ನನ್ನು ಅರ್ಥ ಮಾಡಿಕೊಳ್ಳಲಿ ಅನ್ನುತ್ತೆ ಈ ಮುಗ್ಢ ಮೂರ್ಖ ಮನಸು..ಎಷ್ಟು ಗೊಂದಲಮಯ ಅಲ್ವಾ?? :)

    ದಿನದ ರಭಸದ ಜಂಜಾಟಗಳಲಿ.. ಹೊರ-ಪ್ರಪಂಚದ ಸೊಗಸು ಸವಿಯುವ ಗದ್ದಲದಲ್ಲಿ.. ದಿನ-ನಿತ್ಯದ ಕೆಲಸದ ಭರಾಟೆಯಲ್ಲಿ.. ಮೆಲ್ಲನೆ ಇಣುಕಿ ನೋಡುತ್ತೆ ಮನ.. ಇದ್ದರೂ ಇಲ್ಲದಂತಿರೋ ಇದು.. ಒಂದೊದು ಸಲ ಇಲ್ಲದ ತಲ್ಲಣ ಹುಟ್ಟಿಸುತ್ತೆ..
    ಮನಸು ಅನ್ನೊದೇ ಇಲ್ಲ್ದಿದ್ರೆ..?! ಅದರಿಂದಾಗೋ ಪ್ರಯೋಜನಗಳು ಮತ್ತು ಹಾನಿಗಳ ಬಗ್ಗೆನೇ ಪುಟಗಟ್ಟಲೇ ಬರೀಬಹುದೇನೋ.. ಈ ಮನಸು ಮತ್ತೆ ಬುಧ್ಧಿ ಒಟ್ಟಿಗೆ ಕೆಲಸ ಮಾಡೊ ರೀತಿ ಮಾತ್ರ ನನಗೆ ಅಚ್ಚರಿ ಹುಟ್ಟಿಸುತ್ತೆ.. ಒಂದು ಸಲ ಮನಸಿಗೆ ಬುದ್ಧಿ ಇಷ್ಟ ಆಗಲ್ಲ ಇನ್ನೊಂದು ಸಲ ಬುದ್ಧಿಗೆ ಮನಸು ಇಷ್ಟ ಆಗಲ್ಲ.. ಮತ್ತೊಮ್ಮೆ ಎರಡೂ ಗೆಳೆಯರು.. ಈಗ ಬರೀತಿದಿನಲ್ಲ.. ಇದು ಮನಸು ಅನ್ಲಾ? ಅಥವ ಬುದ್ಧಿ ನಾ?

    ಮನಸೆ ಓ ಮನಸೆ ಎಂಥಾ ಮನಸೆ..ಮನಸೆ ಒಳ ಮನಸೆ.. ಕೇಳಿದೀರ ಈ ಹಾಡು..? :)

    ಏನೇ ಇರಲಿ ಮನಸಿಗೆ ಅನಿಸಿದ್ದನ್ನು ವ್ಯಕ್ತ ಪಡಿಸೋಕೆ ಇರೋ ಈ ಮುದ್ದಾದ ಭಾಷೆಗೆ.. ಈ ಹಾಳೆಗೆ.. ಈ ಲೇಖನಿಗೆ ನಾನು ಚಿರ-ಋಣಿ.. ಇವಿರಲಿಲ್ಲ ಅಂದರೆ.. ನನ್ನ ಆಂತರಿಕ ಬದುಕನ್ನು ಊಹಿಸಿಕೊಳ್ಳೋದೇ ಅಸಾಧ್ಯ...